
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಇರಾನ್ ನಾಯಕ ಖಮೇನಿ ಹತ್ಯೆ ಹಾಗೂ ಭಾರತದ ಪ್ರಸ್ತುತ ವಿದೇಶಾಂಗ ನೀತಿಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಪ್ರಧಾನಿ ಮೋದಿಯವರ ರಾಜತಾಂತ್ರಿಕ ನಡೆಗಳು ದೇಶದ ಘನತೆಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ ಖಮೇನಿ ಹತ್ಯೆ ಕುರಿತು ಮಾತನಾಡಿದ ಅವರು ಈ ಹತ್ಯೆ ಯುದ್ಧದ ಸಂದರ್ಭದಲ್ಲಿ ನಡೆದಿದ್ದಲ್ಲ, ಬದಲಿಗೆ ಅಮೆರಿಕ-ಇರಾನ್ ನಡುವಿನ ಮಾತುಕತೆ ನಡೆಯುತ್ತಿದ್ದ ವೇಳೆಯೇ ಸಂಚು ರೂಪಿಸಿ ಮಾಡಿದ ಮೋಸದ ಹತ್ಯೆಯಾಗಿದೆ. ಇದು ವಿಶ್ವಸಂಸ್ಥೆಯ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ನೆಹರೂ ಕಾಲದಿಂದಲೂ ಭಾರತ ಪಾಲಿಸಿಕೊಂಡು ಬಂದಿದ್ದ ‘ಅಲಿಪ್ತ ನೀತಿ’ಗೆ ಮೋದಿ ಸರ್ಕಾರ ಸಂಪೂರ್ಣವಾಗಿ ತಿಲಾಂಜಲಿ ನೀಡಿದೆ. ‘ವಾಜಪೇಯಿಯವರೂ ಸಹ ಇರಾನ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಇಂದಿನ ವಿಶ್ವಗುರುಗಳಿಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾಣಿಸುತ್ತಿಲ್ಲ, ಬದಲಿಗೆ ಇಸ್ರೇಲ್ಗೆ ಹೋಗಿ ಡ್ಯಾನ್ಸ್ ಮಾಡಿ ಬಂದಿದ್ದಾರೆ ಎಂದು ಟ್ರಂಪ್ ಹೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ದೊಡ್ಡ ಕೊಲೆಗಡುಕ ಎಂದು ಕರೆದ ಹರಿಪ್ರಸಾದ್, ಅವರನ್ನು ಮೋದಿ ಗೆಳೆಯ ಎಂದು ಕರೆಯುತ್ತಿರುವುದು ದುರಂತ. ಗೋದ್ರಾದಲ್ಲಿ 3000 ಜನರ ಹತ್ಯೆ ಮಾಡಿದ ಕೆಟ್ಟ ಹೆಸರನ್ನು ಇಟ್ಟುಕೊಂಡವರು ಮೋದಿ. ಇತ್ತ ರಷ್ಯಾದಂತಹ ಹಳೆಯ ಮಿತ್ರರೊಂದಿಗೂ ಸಂಬಂಧ ಹಳಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.






