
ಪುತ್ತೂರು: ಕಳೆದ ವರ್ಷ ನವೆಂಬರ್ 27ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಮಹಿಳೆಯೊಬ್ಬರಿಗೆ ಸಿಜೇರಿಯನ್ ಹೆರಿಗೆ ನಡೆಸಿದ ಬಳಿಕ ಬ್ಯಾಂಡೇಜ್ನ ಬಟ್ಟೆಯ ತುಂಡನ್ನು ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿಯೇ ಬಿಟ್ಟು ಹೊಲಿಗೆ ಹಾಕಿದ ಪ್ರಕರಣ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ರಚಿಸಲಾದ ಆರು ಮಂದಿ ಅಧಿಕಾರಿಗಳು ಮತ್ತು ವೈದ್ಯರ ತಂಡವು ಸೋಮವಾರ ಪುತ್ತೂರಿಗೆ ಆಗಮಿಸಿ ವಿಚಾರಣೆ ನಡೆಸಿದೆ.
ಈ ಕುರಿತು ಮಾತನಾಡಿದ ಡಿಎಚ್ಒ ಡಾ| ತಿಮ್ಮಯ್ಯ ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದ ಪುತ್ತೂರಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದೇವೆ. ಸ್ಕ್ಯಾನಿಂಗ್ ಬಳಿಕ ಬಟ್ಟೆ ಹೊರ ತೆಗೆದ ಇನ್ನೊಂದು ಆಸ್ಪತ್ರೆಗೆ ತೆರಳಿ ಅಲ್ಲಿಂದಲೂ ಮಾಹಿತಿ ಸಂಗ್ರಹಿಸಿದ್ದು ಮಂಗಳವಾರವೂ ತನಿಖೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ನ. 27 ರಂದು ಗಗನ್ ದೀಪ್ ಅವರ ಪತ್ನಿ ಶರಣ್ಯ ಲಕ್ಷ್ಮಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದು ಆಪರೇಷನ್ ಸಂದರ್ಭದಲ್ಲಿ ಬ್ಯಾಂಡೇಜ್ನ ಬಟ್ಟೆಯ ಚೂರು ಹೊಟ್ಟೆಯಲ್ಲಿಯೇ ಉಳಿದುಕೊಂಡಿತ್ತು. ಡಿಸೆಂಬರ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು ಸ್ಕ್ಯಾನಿಂಗ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಬಟ್ಟೆ ಚೂರು ಇರುವುದು ಪತ್ತೆಯಾಗಿದೆ. ಬಳಿಕ ಅದನ್ನು ಬೇರೊಂದು ಆಸ್ಪತ್ರೆಯಲ್ಲಿ ಹೊರ ತೆಗೆಯಲಾಯಿತು ಎಂದು ಶರಣ್ಯಲಕ್ಷ್ಮಿ ಅವರ ಪತಿ ಮಾಹಿತಿ ನೀಡಿದ್ದಾರೆ.








