
ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯ ಬಿಟ್ಟಿದ್ದ ವ್ಯಕ್ತಿಯ ವಿರುದ್ಧ ಎಫ್ ಐ ಆರ್ ದಾಖಲಾದ ಘಟನೆ ನಡೆದಿದೆ.
ಸಂತೋಷ ದೇವಾಡಿಗ ಎಂಬಾತ ಫೇಸ್ಬುಕ್ನಲ್ಲಿ “ಪರಶುರಾಮ ಥೀಂ ಪಾರ್ಕ್ ಕಳ್ಳತನಕ್ಕೆ ಟ್ವಿಸ್ಟ್, ಥೀಂ ಪಾರ್ಕ್ ಕಟ್ಟಡ ಒಳಗಿನ ಫ್ಯಾನ್ ಎಲೆಕ್ಟ್ರಿಕಲ್ ಉಪಕರಣಗಳನ್ನು ಮೊದಲೇ ಎಗರಿಸಿದ RSS ಕಾರ್ಯಕರ್ತ” ಎಂಬ ಬರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಷಯ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆ ವ್ಯಕ್ತಿಯ ವಿರುದ್ಧ ಸಮಾಜದಲ್ಲಿ ಜಾತಿ-ಧರ್ಮ ಸಂಘರ್ಷ ಹುಟ್ಟು ಹಾಕಿ, ಶಾಂತಿಯನ್ನು ಕೆಡಿಸುವ ದುರುದ್ದೇಶ ಮತ್ತು ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂಬ ಆರೋಪದಡಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















