
ಹೊಸದಲ್ಲಿ: ರಾಜ್ಯಸಭೆಯ ಉಪ ನಾಯಕರ ಹುದ್ದೆಯಿಂದ ಆಪ್ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರನ್ನು ತೆರವುಗೊಳಿಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ರಾಘವ್ ಛಡ್ಡಾ “ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಿಲ್ಲ” ಎಂದು ತಮ್ಮ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮದೇ ಪಕ್ಷವು ಸಂಸದೀಯ ಕಲಾಪಗಳಲ್ಲಿ ಮಾತನಾಡಲು ಅವಕಾಶ ನೀಡದೆ ತಡೆಹಿಡಿದಿದೆ ಎಂದು ಆರೋಪಿಸಿದ ಅವರು ರಾಜ್ಯಸಭಾ ಕಾರ್ಯಾಲಯಕ್ಕೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡ ಅವರು, ತಮಗೆ ಅವಕಾಶ ಸಿಕ್ಕಾಗಲೆಲ್ಲ ಜನಸಾಮಾನ್ಯರ ಸಮಸ್ಯೆಗಳನ್ನೇ ಸದಾ ಮುಂದಿಟ್ಟಿದ್ದೇನೆ. ಜನರ ಪರವಾಗಿ ಮಾತನಾಡುವುದು ತಪ್ಪೇ ಎಂಬ ಪ್ರಶ್ನೆಯನ್ನು ಅವರು ಎತ್ತಿ, ಇದನ್ನು ಅಪರಾಧದಂತೆ ಕಾಣುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದ್ದಾರೆ.
“ಆಪ್ ಪಕ್ಷವು ನನಗೆ ಮಾತನಾಡಲು ಅವಕಾಶ ನೀಡದಂತೆ ಸಂಸತ್ತಿಗೆ ತಿಳಿಸಿದೆ. ನನ್ನ ಮೌನವನ್ನು ನನ್ನ ಸೋಲು ಎಂದು ಭಾವಿಸದಿರಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ” ಎಂದು ಕಿಡಿಕಾರಿದ್ದಾರೆ.
ತಮ್ಮ ಮಾತುಗಳಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಹೇಳಿದ ಅವರು, ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದೇ ತಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.
ಗುರುವಾರ ಆಪ್ ಪಕ್ಷವು ರಾಘವ್ ಛಡ್ಡಾ ಅವರನ್ನು ಉಪ ನಾಯಕರ ಹುದ್ದೆಯಿಂದ ತೆಗೆದುಹಾಕಲು ರಾಜ್ಯಸಭಾ ಕಾರ್ಯಾಲಯಕ್ಕೆ ಪತ್ರ ರವಾನಿಸಿದ್ದು ಅವರ ಬದಲಿಗೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.









