
ಮಂಗಳೂರು: ಮಂಗಳವಾರ ಮಂಗಳೂರಿನಲ್ಲಿ ಧರ್ಮಸ್ಥಳದಲ್ಲಿ 2003 ರಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾದ ಕುರಿತು ಅನನ್ಯ ಭಟ್ ತಾಯಿ ಸುಜಾತಾ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.2003 ರಲ್ಲಿ ಮಗಳು ಅನನ್ಯ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು ಆಕೆ ತನ್ನ ಸಹಪಾಠಿಗಳೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೋಗಿದ್ದಳು. ಅನನ್ಯ ಜೊತೆಗಿದ್ದ ಸಹಪಾಠಿ ರಶ್ಮಿ, ಅನನ್ಯ ಧರ್ಮಸ್ಥಳ ದೇವಾಲಯದಲ್ಲಿ ಕಾಣೆಯಾಗಿದ್ದಾಳೆ ಎಂದು ನನಗೆ ತಿಳಿಸಿದ್ದಾರೆ. ತಕ್ಷಣ ಆಕೆಯ ಹಹಾಸ್ಟೆಲ್ಗೆಕರೆ ಮಾಡಿದಾಗ, ಅನನ್ಯ ಎರಡು-ಮೂರು ದಿನಗಳಿಂದ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಯಿತು ಎಂದು ಅನನ್ಯ ಭಟ್ ತಾಯಿ ಹೇಳಿಕೆ ನೀಡಿದ್ದಾರೆ.
ಸುಜಾತ ಭಟ್ ಆಗ ಕೊಲ್ಕತ್ತಾದ ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದು ಇದೀಗ ಅವರಿಗೆ 60 ವರ್ಷ ವಯಸ್ಸು.ಇತ್ತೀಚೆಗೆ, ಧರ್ಮಸ್ಥಳದಲ್ಲಿ ಒಬ್ಬ ಸ್ವಚ್ಛತಾ ಕಾರ್ಮಿಕ ತಾನು ಅನೇಕ ಹೆಣ್ಣುಮಕ್ಕಳ ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ತಲೆಬುರುಡೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಸುದ್ದಿಯನ್ನು ಸುಜಾತಾ ಅವರು ಯೂಟ್ಯೂಬ್, ಪತ್ರಿಕೆಗಳು ಮತ್ತು ರಾಷ್ಟ್ರೀಯ ವಾಹಿನಿಗಳಲ್ಲಿ ನೋಡಿದ್ದು ಇದು ಅವರ ಮಗಳ ಅಸ್ಥಿಪಂಜರವು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗಬಹುದು ಎಂಬ ನಂಬಿಕೆಗೆ ಕಾರಣವಾಗಿದೆ. ಸನಾತನ ಹಿಂದೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾದ ಸುಜಾತ ಅವರು, ತಮ್ಮ ಮಗಳ ಮೃತ ದೇಹಕ್ಕೆ ಸಂಪ್ರದಾಯಬದ್ಧವಾಗಿ ಶ್ರಾದ್ಧ ಕಾರ್ಯ ಮಾಡುವುದು ಜೀವನದ ಪ್ರಮುಖ ಕಾರ್ಯವಾಗಿದೆ ಎಂದು ಹೇಳಿದ್ದಾರೆ.






















































