
ಬೆಂಗಳೂರು : ಶನಿವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಮತ್ತು ರೈತ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ ‘ದೀಪದ ಹಿಂದೆ ಎಣ್ಣೆ ಇದೆ. ಕಷ್ಟ ಏನು ಎಂದು ಬತ್ತಿಗೆ ಗೊತ್ತಿದೆ. ಬತ್ತಿಯ ಸಂಕಷ್ಟ ಯಾರಿಗೂ ಕಾಣುವುದಿಲ್ಲ’ ಎಂದು ವೇದಾಂತಿಯಂತೆ ಮಾತನಾಡಿದ್ದಾರೆ.
ವಸ್ತುವೊಂದರ ಮೂಲ ಎಲ್ಲಿಯೋ ಇರುತ್ತದೆ. ಆದರೆ ಅದಕ್ಕೆ ಅಲಂಕಾರ ನೀಡಿದ ನಂತರ ಹೊಸ ರೂಪ ಪಡೆಯುತ್ತದೆ. ಬಳಿಕ ಮೂಲವನ್ನು ಮರೆಯಲಾಗುತ್ತದೆ. ಬದುಕಿನಲ್ಲಿ ಶ್ರಮ ಬಹಳ ದೊಡ್ಡದು. ದೀಪದ ಬೆಳಕು ಮಾತ್ರ ಕಾಣಿಸುತ್ತದೆಯೇ ಹೊರತು ಬತ್ತಿಯ ಸಂಕಷ್ಟ ಯಾರಿಗೂ ಕಾಣಿಸುವುದಿಲ್ಲ’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
‘ಬಿದಿರಿನ ಬೊಂಬಿನಲ್ಲಿ ಕೊಳಲು ತಯಾರು ಮಾಡುತ್ತಾರೆ. ಆ ಕೊಳಲಿನಿಂದ ಎಂತಹ ನಾದ ಬರುತ್ತದೆ ಎಂದು ಆ ಬೊಂಬಿಗೇ ತಿಳಿದಿರುವುದಿಲ್ಲ. ಕೃಷ್ಣನ ಕೊಳಲಿನ ನಾದ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಕುರಿ, ಕೋಣ, ಮೇಕೆಯ ಚರ್ಮದಲ್ಲಿ ತಮಟೆ ಮಾಡುತ್ತೇವೆ. ನಾನು ಇಲ್ಲಿಗೆ ಆಗಮಿಸಿದಾಗ ಚೆನ್ನಾಗಿ ಡೋಲು ಬಾರಿಸಿದರು. ಆದರೆ ಈಗ ಕೆಲವರು ಪ್ಲಾಸ್ಟಿಕ್ನಲ್ಲಿ ಡೋಲು ತಯಾರಿಸುತ್ತಾರೆ. ಆದರೆ ಡೋಲಿನ ಮೂಲ ಎಲ್ಲಿಯದು? ಕುರಿ, ಕೋಣ, ಮೇಕೆಯ ಚರ್ಮದಿಂದ ಬಂದಿದ್ದು ತಾನೇ’ ಎಂದು ಹೇಳಿದರು.
ಅಧಿಕಾರ ಹಸ್ತಾಂತರದ ಬಗ್ಗೆ ತೀವ್ರ ಗೊಂದಲ ನಡೆಯುವಾಗಲೇ ಶಿವಕುಮಾರ್ ಅವರು ಈ ರೀತಿ ಒಗಟಾಗಿ ಮಾತನಾಡಿರುವುದು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.





