
ಮಂಗಳೂರು: ಜಿಲ್ಲಾ ಕಂಬಳ ಸಮಿತಿಯು ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಈ ಬಾರಿ ಸಮಯ ಪಾಲನೆಗೆ ಆದ್ಯತೆ ನೀಡಲು ನಿಯಮಾವಳಿ ಸೂತ್ರ ಅನುಷ್ಠಾನಕ್ಕೆ ನಿರ್ಧರಿಸಿದೆ.
ಈ ಹಿಂದೆ ಒಂದು ವಿಭಾಗದ ಕೋಣಗಳು ಕರೆಗೆ ಇಳಿಯಲು ಸುದೀರ್ಘ ಸಮಯ ತಗಲುತ್ತಿತ್ತು. ಇನ್ನು ಮುಂದೆ 30 ನಿಮಿಷಗಳೊಳಗೆ ಇದನ್ನು ಮುಕ್ತಾಯಗೊಳಿಸಬೇಕು. ಕರೆಗೆ ಇಳಿದ ಕೋಣಗಳನ್ನು ನಿಗದಿತ ಸಮಯದ ಒಳಗೆ ಬಿಡಬೇಕು. ಗಂತಿನಲ್ಲಿ ವಿನಾಕಾರಣ ಕಾಲ ಹರಣ ಮಾಡುವಂತಿಲ್ಲ. ಜೂನಿಯರ್ 2 ನಿಮಿಷ ಹಾಗೂ ಸೀನಿಯರ್ 5 ನಿಮಿಷಗಳ ಒಳಗೆ ಕರೆಗೆ ಬಾರದಿದ್ದಲ್ಲಿ ಇದ್ದ ಕೋಣಗಳಿಗೆ ವಾಕ್ ಓವರ್ ನೀಡಲಾಗುವುದು.
ಒಬ್ಬ ಓಟಗಾರ ಒಂದು ವಿಭಾಗದಲ್ಲಿ ಒಂದು ಜತೆ ಕೋಣಗಳನ್ನು ಓಡಿಸಿದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶ. ಒಂದು ವಿಭಾಗದಲ್ಲಿ “ಎ’, “ಬಿ’ (ಒಂದೇ ಯಜಮಾನರ) ಕೋಣಗಳನ್ನು ಓಡಿಸಿದ್ದಲ್ಲಿ 3 ವಿಭಾಗಕ್ಕೆ ಸೀಮಿತಗೊಳಿಸಲಾಗುತ್ತದೆ. “ಎ’, “ಬಿ’, “ಸಿ’ ಮೂರು ಕೋಣಗಳನ್ನು ಓಡಿಸಿದ್ದಲ್ಲಿ ಮತ್ತೆ ಒಂದು ಜತೆ ಕೋಣ ಓಡಿಸಲು ಅವಕಾಶವಿರಲಿದೆ. ಕೋಣ ಬಿಡುವವರೂ ಒಂದು ವಿಭಾಗದಲ್ಲಿ ಒಂದು ಜತೆ ಬಿಡಬೇಕು. ಗರಿಷ್ಠ 4 ಜತೆ ಮಾತ್ರ (“ಎ’, “ಬಿ’ ಅವಕಾಶ) ಇರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಗಳು ಮುಗಿದ 10 ನಿಮಿಷಗಳಲ್ಲಿ ಮುಂದಿನ ಸ್ಪರ್ಧೆಗೆ ಚೀಟಿ ಹಾಕಬೇಕು. ಆ ಹೊತ್ತಿನಲ್ಲೇ ಯಾವ ಹೊತ್ತಿಗೆ ಸ್ಪರ್ಧೆ ಎಂಬುದನ್ನು ತಿಳಿಸಬೇಕು.
ಶೇಡಿಂಗ್ ಬಿಗಿ ಹಿಂದಿನ ಕಂಬಳದ ಬಹುಮಾನ ವಿಜೇತ ಜೋಡಿ ಕೋಣಕ್ಕೆ ಯಾವುದೇ ಹೆಸರಿನಲ್ಲಿ ಓಡಿಸಿದರೂ “ಶೇಡಿಂಗ್’ (ಅದೇ ರೀತಿಯ ಸ್ಪರ್ಧೆ ಈ ಬಾರಿ ಸಿಗದಂತೆ ಮಾಡುವ ಕ್ರಮ) ಇರುತ್ತದೆ. ಒಂದು ಕೋಣ ಹಿಂದಿನ ಕಂಬಳದ ಯಜಮಾನನ ಹೆಸರು ಇದ್ದರೆ ಶೇಡಿಂಗ್ ನೀಡಬೇಕು. ಒಂದು ಕೋಣ ಇದ್ದು, ಬೇರೆಯವರ ಹೆಸರಿನಲ್ಲಿ ಓಡಿಸಿದರೆ ಶೇಡಿಂಗ್ ನೀಡುವುದಿಲ್ಲ.


ಕಿರಿಯ ವಿಭಾಗದಲ್ಲಿ ಅತಿ ಹೆಚ್ಚು ಕೋಣಗಳು ಇರುವುದರಿಂದ ಈ ವ್ಯವಸ್ಥೆಗೆ “ಆ್ಯಪ್’ ಬಳಸಿ ಸಾಲು ನಿರ್ಣಯಿಸಲಾ ಗುತ್ತದೆ. ಅನುಕೂಲಕ್ಕಾಗಿ ಕರೆಗೆ ಇಳಿಯುವ ಸಂದರ್ಭ ಮಂಜೊಟ್ಟಿಯಲ್ಲೇ ಹೆಸರು ನೋಂದಣಿ ಮಾಡಿಸಬೇಕು. ಎಲ್ಇಡಿ ಟೈಮರ್ ಸ್ಟಾರ್ಟಿಂಗ್ನಲ್ಲಿ ಅಳವಡಿಸಿ ಕೋಣಗಳ ಸಮಯ ಪಾಲನೆಗೆ ಸೈರನ್ ವ್ಯವಸ್ಥೆ ಜಾರಿಗೆ ಬರಲಿದೆ.
- ಸಾಂಪ್ರದಾಯಿಕ ಆಚರಣೆಯ ಕಂಬಳ ಬೆಳಗ್ಗೆ 10:45ಕ್ಕೆ ಪ್ರಾರಂಭ, ಮರುದಿನ ಬೆಳಗ್ಗೆ 10:45ಕ್ಕೆ ಮಕ್ತಾಯ
- ಇತರ ಕಂಬಳ ಬೆಳಗ್ಗೆ 9ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 9ಕ್ಕೆ ಮುಕ್ತಾಯ
ಸ್ಪರ್ಧೆಗೆ ನಿಗದಿತ ಸಮಯ ಪಾಲನೆ
ಹಗ್ಗ ಹಿರಿಯ: 10 ನಿಮಿಷ
ಹಗ್ಗ ಕಿರಿಯ: 7 ನಿಮಿಷ
ನೇಗಿಲು ಹಿರಿಯ: 8 ನಿಮಿಷ
ನೇಗಿಲು ಕಿರಿಯ: 6 ನಿಮಿಷ
ಅಡ್ಡ ಹಲಗೆ: 10 ನಿಮಿಷ
ತೀರ್ಪುಗಾರರಿಗೆ ಅನ್ವಯವಾಗುವ ನಿಯಮ:
- ಕಂಬಳ ಪ್ರಾರಂಭದ 30 ನಿಮಿಷ ಮೊದಲು ಗಂತಿನ ತೀರ್ಪು ಗಾರರು 2 ಜನ, ಮಂಜೊಟ್ಟಿ ತೀರ್ಪುಗಾರರು 3 ಜನ, 1 ಬರವಣಿಗೆದಾರರು ಹಾಜರಿರಬೇಕು.
- ರೊಟೇಶನ್ ಪದ್ಧತಿಯಂತೆ ಈ ತೀರ್ಪುಗಾರರು ಕಾರ್ಯನಿರ್ವಹಿಸಬೇಕು.
- ಬೆಳಗ್ಗೆ 8.30ರಿಂದ 12ರ ವರೆಗೆ ಈ ತೀರ್ಪುಗಾರರರಿಗೆ ಕೆಲಸ. ಅನಂತರ 2 ಗಂಟೆಗೊಬ್ಬರಂತೆ ಕಾರ್ಯನಿರ್ವಹಿಸಬೇಕು.
- ಮಂಜೊಟ್ಟಿ ತೀರ್ಪುಗಾರರು ಸೆನ್ಸಾರ್ ಲೈಟ್ ಹಾಗೂ ಟೈಮಿಂಗ್ಸ್ ನೋಡಿ ತೀರ್ಪು ನೀಡಬೇಕು. ಆಗ ಕೇವಲ ಲೈಟ್ ಮಾತ್ರ ಪರಿಗಣಿಸಬಾರದು.
- ಅಗತ್ಯ ಬಿದ್ದಲ್ಲಿ ಥರ್ಡ್ ಅಂಪಾಯರ್ ನಿರ್ಧಾರ ಪಡೆದುಕೊಳ್ಳಬೇಕು.
ಈ ಕುರಿತು ಪ್ರತಿಕ್ರಿಯಿಸಿದ ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ “ಕಂಬಳದ ವಿಷಯದಲ್ಲಿ ಪ್ರತಿ ಯೊಬ್ಬರಿಗೂ ಅವರವರದ್ದೇ ಆದ ಅಭಿಪ್ರಾಯವಿದ್ದರೂ, ವ್ಯವಸ್ಥೆಯ ದೃಷ್ಟಿಯಿಂದ ಸತ್ಯ ಹಾಗೂ ವಾಸ್ತವವನ್ನು ಹುಡುಕಿ ಅದನ್ನು ಅಳವಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಈ ಬಾರಿಯಿಂದ ಕೆಲವು ನಿಯಮಗಳನ್ನು ಜಾರಿಗೆ ತರಲಾಗುವುದು” ಎಂದು ತಿಳಿಸಿದ್ದಾರೆ.







