
ಬೆಂಗಳೂರು: ಮೊನ್ನೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಈ ವಿಚಾರ ಭಾರಿ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೆ ಕೂಡಲೇ ಸ್ಪಷ್ಟನೆ ನೀಡಿರುವ ಡಿಕೆಶಿ, ‘ವಿಜಯಲಕ್ಷ್ಮೀ ಅವರು ತಮ್ಮ ಮಗನಿಗೆ ನಮ್ಮ ಶಾಲೆಯಲ್ಲಿ ದಾಖಲಾತಿಗೆ ಮನವಿ ಮಾಡಲು ಭೇಟಿಯಾಗಿದ್ದರು. ಅದನ್ನು ಹೊರತು ಪಡಿಸಿ ದರ್ಶನ್ ಬಂಧನದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ದರ್ಶನ್-ವಿಜಯಲಕ್ಷ್ಮೀ ಅವರ ಪುತ್ರ ಈ ಹಿಂದೆ ನಮ್ಮ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಅವರು ನನ್ನನ್ನು ಭೇಟಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾಗಲು ಸೂಚಿಸಿದ್ದೇನೆ. ವಿಜಯಲಕ್ಷ್ಮೀ ಅವರು ತಮ್ಮ ಮಗನ ಶಿಕ್ಷಣ ದ ಬಗ್ಗೆ ಕಾಳಜಿವಹಿಸಿ ನನ್ನನ್ನು ಭೇಟಿಯಾಗಿ ಸಹಾಯ ಕೇಳಿದ್ದಾರೆ. ಅವರ ಮಗನ ಶಿಕ್ಷಣದ ಬಗೆಗಿನ ಕಾಳಜಿ ನೋಡಿ ಸಂತಸವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆ ಅವರ ಮನೆಯ ಬಳಿಯಲ್ಲಿಯೇ ಇದೆ. ಹೀಗಾಗಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಕೋರಿದ್ದಾರೆ’ ಎಂದು ಹೇಳಿದರು.











