
ಸಾಮಾಜಿಕ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಿದ್ದ ಚೈತ್ರಾ ಕುಂದಾಪುರ, ತನ್ನ ಬಗ್ಗೆ ಹರಿದಾಡುವ ಸುಳ್ಳು ಮಾಹಿತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ‘ದಿ ಪವರ್ಹೌಸ್ ವೈನ್ಸ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದರು.
ತನ್ನ ಬಗ್ಗೆ ಹೊರಬರುವ ಸುದ್ದಿಗಳಲ್ಲಿ ಬಹುಪಾಲು ತಪ್ಪು ಮಾಹಿತಿಯೇ ಇರುತ್ತದೆ ಎಂದು ಹೇಳಿದ ಅವರು, ಅಗತ್ಯವಿದ್ದಲ್ಲಿ ಸಾಕ್ಷಿ ಮತ್ತು ದಾಖಲೆಗಳ ಮೂಲಕ ಸ್ಪಷ್ಟನೆ ನೀಡುತ್ತೇನೆ ಎಂದರು. ಕೆಲವರು ಹಣಕ್ಕಾಗಿ ಸುಳ್ಳು ಸುದ್ದಿ ಹರಡುವುದು ಬೇಸರದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಟ್ರೋಲ್ಗಳು ಮತ್ತು ನೆಗೆಟಿವ್ ಕಾಮೆಂಟ್ಗಳು ಬಂದಾಗ ಮಾನಸಿಕವಾಗಿ ಕಷ್ಟವಾಗುತ್ತದೆ ಎಂದ ಅವರು, ದೇವರ ಮೇಲೆ ನಂಬಿಕೆ ಇಟ್ಟು ಪ್ರಾರ್ಥನೆ ಮಾಡುತ್ತೇನೆ. ನನಗೆ ಬೇಸರ ಆದಾಗ ನಾನು ಯಾರು, ಎಲ್ಲಿ, ಯಾವಾಗ ಈ ರೀತಿ ನೆಗೆಟಿವ್ ಮಾಡುತ್ತಾರೆ ಎಂದು ಚೀಟಿ ಬರೆಯುತ್ತೇನೆ, ಕಣ್ಣೀರು ಹಾಕ್ತೀನಿ, ಆ ಕಣ್ಣೀರು ಚೀಟಿ ಮೇಲೆ ಬೀಳುವುದು. ಅದನ್ನು ಒಂದು ಗಾಜಿನ ಗ್ಲಾಸ್ಗೆ ಹಾಕಿ, ಪೊಳಲಿ ಭದ್ರಕಾಳಿ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ತಾಯಿ ಮುಂದೆ ಹಾಗೆ ಕೂರುವೆ, ನನ್ನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ, ನನಗೆ ಈ ವಿಚಾರಕ್ಕೆ ಸಂಬಂಧವೇ ಇಲ್ಲ, ಇನ್ಮುಂದೆ ನೀನೇ ನೋಡಿಕೋ ಎಂದು ದೇವರ ಬಳಿ ಹೇಳುತ್ತೇನೆ. ಇದಾಗಿ ಒಂದು ತಿಂಗಳು ಅಥವಾ ಮೂರು ತಿಂಗಳಿಗೆ ಉತ್ತರ ದೊರಕಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ದೇವಿಯ ಮುಂದೆ ಮನಸ್ಸಿನ ನೋವನ್ನು ಹಂಚಿಕೊಳ್ಳುವುದು ತಮಗೆ ಧೈರ್ಯ ನೀಡುತ್ತದೆ ಎಂದರು.
ಇದೇ ವೇಳೆ, ನವರಾತ್ರಿ ಉಪವಾಸ ಮತ್ತು ಪೂಜೆಗಳ ಬಗ್ಗೆ ಮಾತನಾಡಿದ ಚೈತ್ರಾ, ನೀವು ದೇವರ ಮೇಲೆ ನಂಬಿಕೆ ಇಡಿ, ಏನು ನಮ್ಮ ಹಣೆಯಲ್ಲಿ ಬರೆದಿದ್ಯೋ ಅದು ಆಗುವುದು, ಅದನ್ನು ಬದಲಾಯಿಸಲು ಆಗೋದಿಲ್ಲ. ದೇವರನ್ನು ನಂಬಿದರೆ, ಅವನು ಕೈಬಿಡೋದಿಲ್ಲ ಎಂದು ಹೇಳಿದ್ದಾರೆ.






















































