
ಕೊಪ್ಪಳ: ಕೊಪ್ಪಳ ಜಿಲ್ಲೆಯ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಅವರು ಇಲಾಖೆಯ ವಿರುದ್ಧ ವಾಟ್ಸಾಪ್ ನಲ್ಲಿ ‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರಾಟವೇ ಉತ್ತಮ’ ಎಂದು ಸ್ಟೇಟಸ್ ಹಾಕಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಪೇದೆಯೊಂದಿಗೆ ಮಾತನಾಡಿರುವುದಾಗಿ ತಿಳಿಸಿ, ಇದು ಅವರ ವೈಯಕ್ತಿಕ ಕಾರಣಗಳಿಂದ ಮಾಡಿದ ಪೋಸ್ಟ್ ಎಂದು ಹೇಳಿದರು.
ಆದರೆ ಶಿಸ್ತಿನ ಇಲಾಖೆಯ ಸಿಬ್ಬಂದಿ ಇಂತಹ ಸಾರ್ವಜನಿಕ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ರಜೆ ವಿಚಾರದಲ್ಲಿ ಪೇದೆಗೆ ಅನ್ಯಾಯವಾಗಿಲ್ಲ, ಕಳೆದ ಒಂದು ವರ್ಷದಲ್ಲಿ ಅವರು 25 ರಜೆಗಳನ್ನು ಪಡೆದಿದ್ದಾರೆ. ಕೆಲಸದ ಒತ್ತಡ ಸಹಜವಾಗಿದ್ದು, ಅದನ್ನು ನಿಭಾಯಿಸಲು ತರಬೇತಿಯಲ್ಲೇ ಮಾರ್ಗದರ್ಶನ ನೀಡಲಾಗುತ್ತದೆ. ಸದ್ಯ ಪಿಎಸ್ಐ ವರದಿ ಪಡೆಯಲಾಗುತ್ತಿದ್ದು, ನೋಟಿಸ್ ನೀಡಿ ವಿವರಣೆ ಪಡೆದ ಬಳಿಕ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



















