
ಬೆಂಗಳೂರು: ಮಾರ್ಚ್ 26ರಂದು ಹುಳಿಮಾವು ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ಮನೆಯಲ್ಲಿ ಆರೋಪಿ ರಾಕೇಶ್ ತನ್ನ ಪತ್ನಿ ಗೌರಿಯನ್ನು ಬರ್ಬರವಾಗಿ ಹತ್ಯೆಗೈದು ಸೂಟ್ಕೇಸ್ ಬ್ಯಾಗಿನಲ್ಲಿ ಇರಿಸಿದ್ದು ಇದೀಗ ಆರೋಪಿ ರಾಕೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಾನುವಾರ ಮಹಾರಾಷ್ಟ್ರದ ಪುಣೆಯಿಂದ ಆರೋಪಿ ರಾಕೇಶ್ ನನ್ನು ಕರೆತಂದು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿ ವಿಚಾರಣೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರ್ಯ ಗ್ರಹಕ್ಕೆ ಕಳುಹಿಸಲಾಗಿದ್ದು ಮಂಗಳವಾರ ಮತ್ತೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ:
ರಾಕೇಶ್ ಪತ್ನಿ ಗೌರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದು ಬಳಿಕ ಮೃತ ದೇಹವನ್ನು ಟ್ರಿಲಿ ಬ್ಯಾಗ್ ನಲ್ಲಿ ತುಂಬಿ ಸಾಗಿಸುವ ವೇಳೆ ಅದರ ಹ್ಯಾಂಡಲ್ ಕಟ್ಟಾದ ಕಾರಣ ರಾಕೇಶ್ ಅದನ್ನು ಮನೆಯಲ್ಲಿಯೇ ಬಿಟ್ಟು ಕಾರಿನಲ್ಲಿ ಪುಣೆಗೆ ತೆರಳಿದ್ದ. ಮಾರ್ಚ್ 27ರಂದು ಗೌರಿಯ ಸಹೋದರನಿಗೆ ಕರೆ ಮಾಡಿ ಪತ್ನಿ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದ ರಾಕೇಶ್ ಮಾರ್ಗ ಮಧ್ಯೆ ಫಿನೈಲ್ ಕುಡಿದು ಅಸ್ವಸ್ಥಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಪುಣೆ ಪೊಲೀಸರ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಕೊಲೆ ಮಾಡಲು ಕಾರಣ:
ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ ಈ ದಂಪತಿ, ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಕೇಶ್ ಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಆತ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಆದರೆ ಪತ್ನಿ ಗೌರಿಗೆ ಕೆಲಸ ಸಿಕ್ಕಿರದ ಕಾರಣ ಇದೇ ವಿಚಾರಕ್ಕೆ ಕೆಲ ದಿನಗಳಿಂದ ಗಲಾಟೆ ನಡೆಯುತ್ತಿದ್ದು ಅಲ್ಲದೆ ಗೌರಿ ಮತ್ತೆ ಪುಣೆಗೆ ವಾಪಸ್ ಹೋಗುವಂತೆ ಪತಿಯನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ರಾಕೇಶ್ ಪುಣೆಯಲ್ಲಿದ್ದಾಗಲೂ ನನ್ನ ಪೋಷಕರಿಂದ ದೂರ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಿರುವೆ, ಇದೀಗ ಮತ್ತೆ ಅಲ್ಲಿಗೆ ಹೋಗೋಣ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದು ಹೀಗೆ ಈ ಜಗಳ ತಾರಕಕ್ಕೇರಿ ಪತ್ನಿಯನ್ನು ಹತ್ಯೆ ಮಾಡಿದ್ದನು.




