
ಕಾರ್ಕಳ: ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಸಂಗ್ರಹವಾಗಿದ್ದ ಒಂದು ಪ್ರಮುಖ ಕಡತ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ರೆಕಾರ್ಡ್ ರೂಮ್ ಸಿಬ್ಬಂದಿ ಶ್ರೀನಾಥ್ ವಿರುದ್ಧ ದೂರು ದಾಖಲಾಗಿದೆ.
ಉಪ ತಹಶೀಲ್ದಾರ್ ಹರಿಪ್ರಸಾದ್ ಭಟ್ ಅವರು ನೀಡಿದ ದೂರಿನ ಪ್ರಕಾರ, ಎರ್ಲಪಾಡಿ ಗ್ರಾಮದ MR 03/10-11 ಸಂಬಂಧಿತ ಕಡತವು ಅಭಿಲೇಖಾಲಯದಿಂದ ನಾಪತ್ತೆಯಾಗಿದೆ. ಈ ಕಡತದ ನಕಲನ್ನು 2022-23ನೇ ಸಾಲಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಒದಗಿಸಲಾಗಿತ್ತು.
ಆದರೆ ನಂತರ ಅದೇ ಕಡತದ ದಾಖಲೆಗಳನ್ನು ಮತ್ತೆ ಮಾಹಿತಿ ಹಕ್ಕಿನಡಿ ಪಡೆಯಲು ಅರ್ಜಿದಾರರು ಮನವಿ ಮಾಡಿದಾಗ, ಆ ದಾಖಲೆಗಳು ಲಭ್ಯವಿಲ್ಲವೆಂದು ರೆಕಾರ್ಡ್ ರೂಮ್ ಸಿಬ್ಬಂದಿ ಶ್ರೀನಾಥ್ ಹಿಂಬರಹ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


ಈ ಹಿನ್ನೆಲೆಯಲ್ಲಿ ಕಡತ ನಾಪತ್ತೆಯಾಗಿರುವುದು ಕರ್ತವ್ಯ ಲೋಪದ ಪರಿಣಾಮವಾಗಿರಬಹುದು ಎಂಬ ಆರೋಪದ ಮೇರೆಗೆ ಶ್ರೀನಾಥ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







