25 ಭಜನಾ ಮಂಡಳಿಗಳಿಗೆ ನೆರವು

ಕಾರ್ಕಳದ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ 25 ಭಜನಾ ಮಂಡಳಿಗಳ ಸದಸ್ಯರಿಗೆ ಸಮವಸ್ತ್ರಕ್ಕಾಗಿ ತಲಾ 10,000 ರೂ. ಸಹಾಯಧನ ಹಸ್ತಾಂತರಿಸುವ ಕಾರ್ಯಕ್ರಮವು ಕಾರ್ಕಳ ಗಾಂಧಿ ಮೈದಾನದಲ್ಲಿ ನವೆಂಬರ್ 4ರಂದು ನಡೆಯಿತು. ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರೂ, ಪ್ರಾಂಶುಪಾಲರೂ ಆದ ವಿದ್ವಾನ್ ಗಣಪತಿ ಭಟ್ ಅವರು ಅಧ್ಯಕ್ಷತೆ ವಹಿಸಿ ಸಂಪಾದನೆ ಮಾಡಿದ ದುಡ್ಡಿಗೆ ದಾನ, ಭೋಗ್ಯ ಮತ್ತು ವಿನಿಯೋಗ ಎಂಬ ಮೂರು ದಾರಿಗಳಿವೆ. ಅದ್ಯಾವುದೂ ಮಾಡದೇ ಹೋದರೆ ಸಂಪತ್ತು ನಾಶವಾಗುತ್ತದೆ. ಅಮ್ಮನ ನೆರವು ಟ್ರಸ್ಟಿನ ಅವಿನಾಶ್ ಜಿ ಶೆಟ್ಟಿಯವರು ತಮ್ಮ ಸಂಪಾದನೆಯ ಬಹುದೊಡ್ಡ ಭಾಗವನ್ನು ಸತ್ಪಾತ್ರ ದಾನಕ್ಕೆ ಬಳಸಿಕೊಂಡ ಕಾರಣ ಅವರು ನಮಗೆಲ್ಲ ಮಾದರಿ ಆಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮೂಲತಃ ಕಾರ್ಕಳದವರಾಗಿದ್ದು ಇದೀಗ ಅಮೇರಿಕಾದ ಬೋಸ್ಟನ್ ನಗರದ ನಾರ್ತ್ ಈಸ್ಟರ್ನ್ ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮತ್ತು ರಾಷ್ಟ್ರಪತಿಯವರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಪದಕವನ್ನು ಪಡೆದಿರುವ ಕುಮಾರಿ ವಿಂಧ್ಯಾ ಅವರನ್ನು ಟ್ರಸ್ಟ್ ವತಿಯಿಂದ ಮಾನಪತ್ರ ಸಹಿತವಾಗಿ ಸನ್ಮಾನಿಸಲಾಯಿತು. ವಿಂಧ್ಯಾ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಕಳದ ರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ದೇವಿಪ್ರಸಾದ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳದ ಭಜನಾ ಸೇವಾ ಸಮಿತಿಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಉದ್ಯಮಿಗಳಾದ ಜಾರ್ಕಳ ಕಮಲಾಕ್ಷ ನಾಯಕ್, ಅಮ್ಮನ ನೆರವು ಟ್ರಸ್ಟಿನ ಹಿರಿಯರಾದ ಗಿರಿಜಾ ವಿ ಶೆಟ್ಟಿ, ಅನಿವಾಸಿ ಉದ್ಯಮಿ ಪ್ರಕಾಶ್ ವಿ ಶೆಟ್ಟಿ, ಟ್ರಸ್ಟಿ ಐಶ್ವರ್ಯ ಅವಿನಾಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದು ಅವಿನಾಶ್ ಅವರ ಸೇವಾ ಚಟುವಟಿಕೆಗಳನ್ನು ಶ್ಲಾಘನೆ ಮಾಡಿದರು. ಭಾಗವಹಿಸಿದ ಎಲ್ಲ ಭಜನಾ ಮಂಡಳಿಗಳಿಗೆ ಸಹಾಯ ಧನವನ್ನು ಚೆಕ್ ಮೂಲಕ ಅತಿಥಿಗಳು ಹಸ್ತಾಂತರ ಮಾಡಿದರು.

ಟ್ರಸ್ಟಿನ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಅವರು ಸ್ವಾಗತ ಮಾಡಿ ಗ್ರಾಹಕರ ಸಂಪೂರ್ಣ ಸಹಕಾರದಿಂದ ಕಾರ್ಕಳ ಗಾಂಧಿ ಮೈದಾನದಲ್ಲಿ ದೀಪಾವಳಿಯ ಪಟಾಕಿ ವ್ಯಾಪಾರ ಮಾಡಿ, ಬಂದ ಲಾಭಾಂಶದಲ್ಲಿ ಈ ಸೇವಾ ಕಾರ್ಯಕ್ಕೆ ವಿನಿಯೋಗ ಮಾಡಿದ್ದೇವೆ ಎಂದು ಹೇಳಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಧನ್ಯವಾದ ಸಲ್ಲಿಸಿದರು.





















































